Thursday, June 11, 2015

ದ್ರೌಪದಿಯ ವ್ಯಕ್ತಿತ್ವ: ಎರಡು ಕೃತಿಗಳಲ್ಲಿನ ವಿಭಿನ್ನತೆ


palace of illusions

ಮಹಾಭಾರತದಲ್ಲಿ ದ್ರೌಪದಿ ನನ್ನ ಅಚ್ಚು ಮೆಚ್ಚಿನ ಪಾತ್ರ. ಆಕೆಗೆ ಬಂದ ಕಷ್ಟಗಳೆಷ್ಟೋ , ಅನುಭವಿಸಿದ ದುಃಖಗಳೆಷ್ಟೋ? ಮಹಾಭಾರತ ಕತೆಯನ್ನು ಪಾಂಚಾಲಿಯ ದೃಷ್ಟಿ ಕೋನದಿಂದ ಕೇಳಿದರೆ ಅವಳ ವ್ಯಕ್ತಿತ್ವದ ಹೊಸ ಆಯಾಮವೊಂದು ನಮಗೆ ಪರಿಚಯವಾಗಬಹುದು.  ಇಂತಹ ಒಂದು ಪ್ರಯತ್ನವಾದ  ಚಿತ್ರ ಬ್ಯಾನರ್ಜಿ ದಿವಾಕರುಣಿ  ಅವರು ಇಂಗ್ಲೀಶ್ ನಲ್ಲಿ ಬರೆದಿರುವ "ಪ್ಯಾಲೇಸ್ ಆಫ್ ಇಲೂಶನ್ಸ್" ಎಂಬ ಪಾಂಚಾಲಿಯ ಮಹಾಭಾರತ ಓದಿದೆ. ಇದರಲ್ಲಿ ದ್ರೌಪದಿಯೆ ತಾನು ಕಂಡ ಮಹಾಭಾರತವನ್ನು ಓದುಗರಿಗೆ ಹೇಳುತ್ತಾಳೆ. ಇದೇ ಸಮಯದಲ್ಲಿ ಯಕ್ಷಗಾನದ ಕವಿಯಾಗಿರುವ ವಿಷ್ಣು ವಾರಂಬಳ್ಳಿ ಬರೆದಿರುವ "ವಿರಾಟ ಪರ್ವ" ಎನ್ನುವ ಪ್ರಸಂಗ ಓದುವ ಅವಕಾಶ ದೊರಕಿತು. ಇವೆರಡು ಕೃತಿಗಳಲ್ಲಿ ದ್ರೌಪದಿಯ ಪಾತ್ರ ಚಿತ್ರಣದಲ್ಲಿ ಬರುವ ಸೂಕ್ಷ್ಮ ವ್ಯತ್ಯಾಸ ನನ್ನ ಗಮನ ಸೆಳೆಯಿತು. ವಿರಾಟ ಪರ್ವದಲ್ಲಿ ಬರುವ ಕೀಚಕ - ದ್ರೌಪದಿಯ ವ್ರತ್ತಾಂತವನ್ನು ನಿದರ್ಶನವಾಗಿಟ್ಟುಕೊಂಡು ಈ ಎರಡು ಕೃತಿಗಳಲ್ಲಿ ದ್ರೌಪದಿಯ ಪಾತ್ರ ಚಿತ್ರಣದಲ್ಲಿರುವ ವ್ಯತ್ಯಾಸವನ್ನು ಗುರುತಿಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ.

ಪಾಂಡವರ ಅಜ್ಞಾತ ವಾಸ ಸಂಧರ್ಭದಲ್ಲಿ, ವಿರಾಟ ರಾಜನ ಆಸ್ಥಾನದಲ್ಲಿ ಮಾರು ವೇಷ ಧರಿಸಿ ಆಶ್ರಯ ಪಡೆಯುತ್ತಾರೆ. ಇಲ್ಲಿ ದ್ರೌಪದಿ, ಸೈರೆಂಧ್ರಿಯಾಗಿ ಸುದೇಷ್ಣೆಯ ದಾಸಿಯಾಗಿ ದುಡಿಯುತ್ತಿರುತ್ತಾಳೆ. ಸುದೇಷ್ಣೆಯ ತಮ್ಮ ಕೀಚಕ. ಆತ ಸೈರೆಂಧ್ರಿಯ ರೂಪಕ್ಕೆ ಮರುಳಾಗಿ, ಪರ ಸತಿಯಾದರೂ ಆಕೆಯನ್ನು ಹೊಂದಬೇಕೆಂಬ ಚಪಲದಿಂದ ನಾನಾ ವಿಧದಲ್ಲಿ ಪೀಡಿಸುತ್ತಾನೆ. ಇವನಿಂದ ತಪ್ಪಿಸಿಕೊಳ್ಳಲು ರಾಜಾಸ್ಥಾನಕ್ಕೆ ಓಡಿದ ಸೈರೆಂಧ್ರಿ ಯನ್ನು ಕೀಚಕ ತುಂಬಿದ ಸಭೆಯಲ್ಲಿ ತುಳಿದು ಅವಮಾನಗೊಳಿಸುತ್ತಾನೆ. ಪಾಪಿ ಕೀಚಕನಿಂದ ಪಾರಾಗುವ ದಾರಿ ಕಾಣದೆ ದ್ರೌಪದಿ ಬಹು ದುಃಖಿತಳಾಗುತ್ತಾಳೆ. ನಂತರ ತನ್ನ ಗಂಡಂದಿರಾದ ಐವರಲ್ಲಿ ಭೀಮನೇ  ಕೀಚಕನ ಕೊಲ್ಲುವ ಶಕ್ತಿಯುಳ್ಳವನು ಹಾಗು ನನ್ನ ಕಷ್ಟಗಳಿಗೆ ಸ್ಪಂದಿಸುವ ಇನಿಯ ಎಂದೆಣಿಸಿ, ಆತನಲ್ಲೇ ತನ್ನ ಕಷ್ಟ ಹೇಳಿಕೊಳ್ಳುತ್ತೇನೆ ಎಂದು ಬಾಣಸಿಗನ ವೇಷದಲ್ಲಿರುವ ಭೀಮನಲ್ಲಿಗೆ ರಾತ್ರಿಯ ಸಮಯ ಧಾವಿಸುತ್ತಾಳೆ. ಭೀಮನೂ ತನ್ನ ಮೊರೆಯನ್ನು ಆಲಿಸದಿದ್ದಲ್ಲಿ ವಿಷ ಕುಡಿದು ಪ್ರಾಣ ಕಳೆದುಕೊಳ್ಳುವೆನೆಂದು ಯೋಚಿಸುತ್ತಾಳೆ.
ಈ ಸಂಧರ್ಭವನ್ನು ಕವಿ ವಿಷ್ಣು ವಾರಂಬಳ್ಳಿ, ಕುಮಾರ ವ್ಯಾಸನ "ಕರ್ಣಾಟ ಭಾರತ ಕಥಾ ಮಂಜರಿ" ಯನ್ನು ಅನುಸರಿಸಿ ಬರೆದಿರುವ ತನ್ನ ವಿರಾಟ ಪರ್ವ ಪ್ರಸಂಗದಲ್ಲಿ ಹೀಗೆ ಬಣ್ಣಿಸುತ್ತಾನೆ.
... ಇವರೆಲ್ಲರೊಳು ಭೀಮನು | ಎನ್ನಯ ಕಾಮಿ | ತವ ಸಲಿಸುವ ಕಾಂತನು ||
ಅವಗೆದೂರುವೆನಾತ | ನೊಳಗಾಗದಿರಲು ವಿ | ಷವನೆ ಕುಡಿವೆನೆಂದಳು | ಶೋಕದೊಳು || ಎಂತು ।
ಮುಂದೆ ದ್ರೌಪದಿ ಭೀಮನಲ್ಲಿ ತನಗೊದಗಿಬಂದ ಪರಿಸ್ಥಿತಿಯನ್ನು ವಿವರಿಸುವ ಸಂಧರ್ಭದಲ್ಲಿ ವಿಷ್ಣು ವಾರಂಬಳ್ಳಿಯ ಪದ್ಯ ಹೀಗಿದೆ.
ಪೇಳಲೇನಾನಿನ್ನು | ಎನ್ನಳಲನು | ಪೇಳಲೇನಾನಿನ್ನು    ||ಪಲ್ಲವಿ||
ನಿನ್ನೆ ಕೀಚಕನು  | ಎಂದೆನಿಪೋರ್ವ | ಕುನ್ನಿಯೊದೆದನೆನ್ನನು ||ಬೆನ್ನ ಬಿಡನು ಪಾಪಿ | ಯಾ ಖೂಳ  ನುಪಟಳ | ವಿನ್ನೆಂತು ತಾಳುವೆನು | ಬಾಳುವೆನು || ಪೇಳ ||
ನಿನ್ನಂಥ ವಲ್ಲಭರು | ಇದ್ದರು ನಾನು | ಬನ್ನಬಡುವುದಾದರು ||
ಇನ್ನು ಪ್ರಾಣವ ಕಳೆ | ಕೊಂಬೆನೀ ಪಾತಕ | ನಿನ್ನ ತಟ್ಟುವುದೆಂದಳು | ಶೋಕದೊಳು || ಪೇಳು ||
ದ್ರೌಪದಿಯ ಈ ಮಾತಿಗೆ ಭೀಮ, ನಾನು ನನ್ನಣ್ಣನ ಆಜ್ಞೆ ಮೀರದವನಾಗಿದ್ದೇನೆ, ನಾ ನಿನಗೆ ಯಾವುದೇ ಸಹಾಯವನ್ನೂ ಮಾಡಲಾರೆ, ಉಳಿದ ನಾಲ್ವರು ಗಂಡಂದಿರಲ್ಲಿ ಹೋಗಿ ಕೇಳಿಕೋ ಎನ್ನುತ್ತಾನೆ. ಈ ಮಾತಿಗೆ, ದ್ರೌಪದಿ ಇನ್ನೂ ದುಃಖತಪ್ತಳಾಗಿ ಏನಿಂತ ಅವಸ್ಥೆ ಎದುರಿಸಬೇಕಾಗಿ ಬಂತು, ಇನ್ನು ಯಾರಲ್ಲಿ ನನ್ನ ಕಷ್ಟವನ್ನು ಹೇಳಿಕೊಳ್ಳುವುದು, ಅಪ್ರತಿಮ ವೀರರಾದ ಐವರು ಗಂಡಂದಿರಿದ್ದರೂ, ನನ್ನ ಸಲಹುವರ್ಯಾರೂ  ಇಲ್ಲ. ಇನ್ನು ನನ್ನ ಪ್ರಾಣ ತ್ಯಜಿಸುವುದೊಂದೇ ದಾರಿ, ಇದಕ್ಕೆ ಕೊಡು ಅಪ್ಪಣೆ ಎಂದು ಭೀಮನಲ್ಲಿ ಕೇಳಿಕೊಳ್ಳುತ್ತಾಳೆ. ವಿಷ್ಣು ವಾರಂಬಳ್ಳಿಯ ಈ ಸಂಧರ್ಭದ ಭಾಮಿನಿ ಹೀಗಿದೆ.
ಎರೆಯ ಕೇಳೈ ಎನ್ನ ಮರಣವು |
ಹರುಷವಾಯಿತೆ ನಿನಗೆ ನೀವಿ |
ನ್ನರಸನಾಜ್ಞೆಯ ಮೀರದಿಹುದಯ್ವರುಗಳೊಂದಾಗಿ ||
ಹರ ಹರಾ ತಾನೇಕೆ ನಿಮ್ಮಯ |
ತರುಣಿಯಾದೆನೊ ಭೀಮ ಕೊಡಿಸೈ |
ಮರಣಕಪ್ಪಣೆಯೆನುತಲೆರಗಿದಳಾಗ ಕಮಲಾಕ್ಷಿ ||
ಈ ಎಲ್ಲ ವರ್ಣನೆಯಲ್ಲಿ ದ್ರೌಪದಿಯು ತನ್ನ ಸಾವಿನ ಬಗ್ಗೆ ಮಾತನಾಡಿದ ಭಾವ ಗಮನಿಸಬೇಕು. ಇಲ್ಲಿ ವ್ಯಕ್ತವಾಗುವ  ಭಾವ ಹತಾಶೆ. ಯಾವುದೇ  ದಾರಿ ತೋರದೆ ಸಾಯುವುದೊಂದೇ ಉಳಿದ ದಾರಿ ಎನ್ನುವ ಅಸಹಾಯಕತೆ.

ಇದೇ ಸಂಧರ್ಭವನ್ನು ಚಿತ್ರ ದಿವಾಕರುಣಿಯವರು, ತಮ್ಮ ದ್ರೌಪದಿಯ ಪಾತ್ರ ಹೀಗೆ ಹೇಳುವಂತೆ ಚಿತ್ರಿಸಿದ್ದಾರೆ.
"I told him (Bhima) I no longer cared if people found out who I was, if Duryodhan won the wager. The dangers of the forest we might have to return to were far less than the ones I faced right here in this palace. I told him of my humiliation in the court and Yudhistir's callous cowardice. I said, "If Keechak touches me again, I'll swallow poison." 
ಇಲ್ಲಿ ದ್ರೌಪದಿಯ ಹತಾಶೆಗಿಂತ, ಆಜ್ಞೆ - ಬೆದರಿಕೆಯ ಛಾಯೆ ಬಿಂಬಿತವಾಗಿದೆ. ಲೇಖಕಿ ತನ್ನ ಕೃತಿಯು  ಉದ್ದಕ್ಕೂ  ದ್ರೌಪದಿಯನ್ನು ಆಧುನಿಕ ಸ್ತ್ರೀ ವಾದಿ ನೆಲೆಯ ಧೀರ, ದಿಟ್ಟ ಮಹಿಳೆಯಾಗಿ ಚಿತ್ರಿಸಿರುವುದು ಕಂಡು ಬರುತ್ತದೆ. ವಿಷ್ಣು ವಾರಂಬಳ್ಳಿ ಯಲ್ಲಿ ಕಂಡು ಬರುವ ಸ್ತ್ರೀಯ ಅಬಲತೆ, ವಿಧೇಯಕತೆ ಮಾಯವಾಗಿದೆ. ಅಸಹಾಯಕತೆಯ ಪರಿಣಾಮ ತನ್ನ ಸಾವಿನ ಬೆದರಿಕೆಯಾಗಿದೆ. ಅಸಹಾಯಕತೆಯಲ್ಲೂ ಯಾರಿಗೂ ಅಧೀನಳಾಗದಿರುವಂತ ಎಚ್ಚರಿಕೆ ಇದೆ. ಪ್ರಭುತ್ವಾಧಿಕಾರಕ್ಕೆ ಪ್ರತಿರೋಧಿಸುವ ಧೋರಣೆಯಿಂದ ಗಂಡನ ಆಜ್ಞೆಯನ್ನು ಧಿಕ್ಕರಿಸುವ ಧೈರ್ಯ ತೋರುತ್ತಾಳೆ ಮತ್ತು ವೈಚಾರಿಕತೆಯಿಂದ ತೀರ್ಮಾನ ಕೈಗೊಳ್ಳುವ ವಿವೇಕ ತೋರಿಸುತ್ತಾಳೆ.

ತನ್ನ ಅಸಹಾಯಕತೆಯಲ್ಲಿ ಕೂಡ ಗಂಡಂದಿರನ್ನು ಧಿಕ್ಕರಿಸುವ ಧೈರ್ಯ ವಾರಂಬಳ್ಳಿ ವಿಷ್ಣುವಿನ ದ್ರೌಪದಿಗೆ ಇಲ್ಲ. ಇಲ್ಲಿ ದ್ರೌಪದಿಗೆ ಗಂಡಂದಿರ ಅಧೀನದಿಂದ ಹೊರಬರಲು ಸಾಧ್ಯವೇ ಆಗುವುದಿಲ್ಲ. ತನ್ನ ಸಾವು ಕೂಡ ಗಂಡ ಅಪ್ಪಣೆ ಕೊಟ್ಟ ಮೇಲೇ! ಯಾವುದೇ ಕಾರಣಕ್ಕೂ ತಾನೇ ಧರ್ಮಜನ ಆಜ್ಞೆಯನ್ನು ಮೀರುತ್ತೇನೆ ಎಂಬ ಮಾತು ಪಾಂಚಾಲಿ ನುಡಿಯುವುದಿಲ್ಲ. ಇಲ್ಲಿ ದ್ರೌಪದಿಗೆ ಯಾವುದೇ ತೀರ್ಮಾನ ಕೈಗೊಳ್ಳುವ ಸ್ವಾತಂತ್ರ್ಯವಿಲ್ಲ. ಕೊನೆಯದಾಗಿ ಆಕೆ ಭೀಮನಲ್ಲಿ ಒಂದೇ ಕೀಚಕನನ್ನು ಕೊಲ್ಲು ಇಲ್ಲವೇ ನನಗೆ ಮರಣದ ಅಪ್ಪಣೆ ನೀಡು ಎಂದು ಕೇಳಿಕೊಳ್ಳುತ್ತಾಳೆ. ತೀರ್ಮಾನ ಗಂಡನಾದ ಭೀಮನಿಗೆ ಬಿಟ್ಟಿದ್ದು. ಪುರುಷಾಧಿಕಾರದ ಸಾಂಪ್ರದಾಯಿಕ ಚೌಕಟ್ಟಿನಲ್ಲೇ ದ್ರೌಪದಿಯ ಪಾತ್ರ ನಿರ್ಮಾಣವಾಗಿದೆ.

ಈ ಎರಡೂ  ಮಾರ್ಗಗಳ ಪರಿಣಾಮ ಒಂದೇ. ಭೀಮನಿಂದ ಕೀಚಕನ ಸಾವು. ವಿಷ್ಣು ವಾರಂಬಳ್ಳಿಯ "ವಿರಾಟ ಪರ್ವ" ಪ್ರಸಂಗದ ಕಾಲ ಸುಮಾರು 1564 ಎಂದು ಗುರುತಿಸಲಾಗಿದೆ. "ಪ್ಯಾಲೇಸ್ ಆಫ್ ಇಲೂಶನ್ಸ್" 2008 ರಲ್ಲಿ ಮೊದಲು ಪ್ರಕಟವಾಗಿದೆ. ಸುಮಾರು 400 ವರ್ಷ ಅಂತರವಿರುವ ಈ ಎರಡೂ ಕೃತಿಗಳಲ್ಲಿ ಬರುವ ಒಂದು ಸಾಮಾನ್ಯ ಅಂಶವೆಂದರೆ ಅವಮಾನ ಸಹಿಸಿಕೊಳ್ಳುವುದಕ್ಕಿಂತ ಸಾಯುವುದೇ ಮೇಲೆ ಎಂಬ ನಿರ್ಧಾರಕ್ಕೆ ಬರುವುದು. ಇದು ಮೂಲ ಕತೆಯಲ್ಲಿ  ಬರುವ ದ್ರೌಪದಿಯ ಸ್ವಭಾವಕ್ಕೆ ಬದ್ಧವಾಗಿದೆ.

ಹೇಗೆ ಸೂಕ್ಷ್ಮ ಬದಲಾವಣೆಗಳಿಂದ ಚಿತ್ರ ದಿವಾಕರುಣಿಯವರು ದ್ರೌಪದಿಯ ವ್ಯಕ್ತಿತ್ವವನ್ನು ಅವಳ ಮೂಲ ಸ್ವಭಾವಕ್ಕೆ ಧಕ್ಕೆ ಬರದಂತೆ, ಆಧುನಿಕ ಸ್ತ್ರೀಯ ಮನೋಭಾವವನ್ನು ವ್ಯಕ್ತ ಪಡಿಸುವಂತೆ ಚಿತ್ರಿಸಿದ್ದಾರೆ ಎಂಬುದು ಇಲ್ಲಿ ಗಮನಾರ್ಹವಾದ ವಿಚಾರ. 

No comments:

Post a Comment