Thursday, June 2, 2016

ಹೀಗೊಂದು ವಿಂಧ್ಯಾಚಲ ಯಾತ್ರೆ

ನನ್ನ ವೃತ್ತಿಯ ಕಾರಣ ಆಗಾಗ ವಾರಣಾಸಿ ಮತ್ತು ಉತ್ತರ ಪ್ರದೇಶ ರಾಜ್ಯದ ಪೂರ್ವ ಭಾಗದ ಕೆಲವು ಪಟ್ಟಣಗಳಿಗೆ ಭೇಟಿ ನೀಡುವ ಅವಕಾಶ ಸಿಕ್ಕಿದೆ. ವಾರಣಾಸಿ ಎಲ್ಲರಿಗೂ ತಿಳಿಸಿರುವಂತೆ ಪವಿತ್ರ ಯಾತ್ರಾ ಸ್ಥಳ. ದಕ್ಷಿಣ ಭಾರತೀಯರಿಗೆ ಕಾಶಿ ಎಂದು ಚಿರ ಪರಿಚಿತ. ವಾರಣಾಸಿಯಿಂದ 65 ಕಿ. ಮೀ ದೂರದಲ್ಲಿರುವ ವಿಂಧ್ಯಾಚಲ ವಿಂಧ್ಯವಾಸಿನಿ ಮಾತೆಯ ಮಂದಿರವೂ ಕೂಡ ಪ್ರಸಿದ್ಧವಾದ ಉತ್ತರ ಭಾರತೀಯ ಯಾತ್ರಾ ಸ್ಥಳ.  

ಮಿರ್ಜಾಪುರ ಮತ್ತು ವಿಂದ್ಯಾಚಲ
ಮಿರ್ಜಾಪುರ, ವಾರಣಾಸಿಗೆ ತಾಗಿಯೇ ಇರುವ ಒಂದು ಜಿಲ್ಲೆ. ಈ ಜಿಲ್ಲೆಯ ಮುಖ್ಯ ಪಟ್ಟಣವೇ ಮಿರ್ಜಾಪುರ. ಗಂಗಾ ತೀರದಲ್ಲಿರುವ ಈ ಪಟ್ಟಣಕ್ಕೆ ಹೊಂದಿಕೊಂಡೇ ವಿಂದ್ಯಾಚಲವೆಂಬ ಈ ಜನಪ್ರಿಯ ಪುಣ್ಯ ಕ್ಷೇತ್ರ ಇದೆ. ಈ ಕಾರಣದಿಂದ ಗೂಗಲ್ ಮ್ಯಾಪ್ ನಲ್ಲಿ ‘ಮಿರ್ಜಾಪುರ ಕಮ್ ವಿಂದ್ಯಾಚಲ’ ವೆಂದು ತೋರಿಸುತ್ತದೆ.

ಈ ಪುಣ್ಯ ಕ್ಷೇತ್ರದ ಬಗ್ಗೆ ಮಿರ್ಜಾಪುರಕ್ಕೆ ತೆರಳುವ ಮುನ್ನವೂ ತಿಳಿದಿರಲಿಲ್ಲ. ಮಿರ್ಜಾಪುರದಿಂದ ಕೇವಲ 5 ಕಿ. ಮೀ‌ ದೂರದಲ್ಲಿರುವ ಈ ಕ್ಷೇತ್ರದ ಬಗ್ಗೆ ನನ್ನ ಕ್ಯಾಬ್ ಚಾಲಕ, ಸಂದೀಪ್ ಹೇಳಿದಾಗಲೂ ನನಗೆ ಅಷ್ಟೊಂದು ಉತ್ಸಾಹ ಬರಲಿಲ್ಲ. ಸಣ್ಣ ಒಂದು‌ ಕ್ಷೇತ್ರವಾಗಿರಬೇಕೆಂದುಕೊಂಡೆ. ಮಿರ್ಜಾಪುರದಲ್ಲಿನ ಕೆಲಸ‌ ಬೇಗನೆ ಮುಗಿದಾಗ, ನೋಡಿಯೇ ಬಿಡೋಣ ಎಂದು ವಿಂದ್ಯಾಚಲಕ್ಕೆ ತೆರಳಲು ಸಂದೀಪನಿಗೆ ಹಸಿರು ನಿಶಾನೆ ತೋರಿಸಿದೆ.


ತಾಪ ತಾಂಡವ 
ಏಪ್ರಿಲ್ ತಿಂಗಳಿನ ಉರಿ ಬಿಸಿಲಿನಲ್ಲಿ ಸುತ್ತಾಡುವುದೇ ಪ್ರಾಣ ಸಂಕಟವಾಗಿತ್ತು. ಮಧ್ಯಾಹ್ನದ ವೇಳೆಯಲ್ಲಿ ಉಷ್ಣಾಂಶ ೪೩ಕ್ಕೆ ಏರಿತ್ತು. ಬೀಸುವ ಬಿಸಿ ಗಾಳಿಯು ‌ಚರ್ಮವನ್ನು ಸುಡುತ್ತಿತ್ತು. ತಲೆಯ ಮೇಲೆ ಬಟ್ಟೆ (ಇಲ್ಲಿ ಈ ಬಟ್ಟೆಗೆ ಗಮ್ ಚಾ ಎನ್ನುತ್ತಾರೆ) ಹಾಕಿಕೊಳ್ಳದೇ ಬಿಸಿಲಿನಲ್ಲಿ ‌ನೆಡೆದರೆ, ತಲೆಯೇ‌ ಕರಗಿ ಹೋದಂತೆ ಭಾಸವಾಗುತ್ತಿತ್ತು. ನೀರು ಮತ್ತು ಇತರ ಪಾನೀಯಗಳನ್ನು ಕುಡಿದಷ್ಟೂ , ಇನ್ನು ಕುಡಿಯಬೇಕೆನಿಸುತ್ತಿತ್ತು. 30-50 ಮೀಟರ್ ಈ ಉರಿಯುವ ಬಾಣಲೆಯಲ್ಲಿ‌ ನೆಡೆದರೂ  ೧೫೦೦  ಮೀಟರು ರೇಸ್ ಪ್ರಾಮಾಣಿಕವಾಗಿ ಓಡಿದಷ್ಟು ಸುಸ್ತಾಗುತ್ತಿತ್ತು. ರಕ್ತಹೀರಿದಂತಾಗಿ, ತಲೆ‌ ಸಿಡಿಯುತ್ತಿತ್ತು. ನೆಡೆದು ಸುಸ್ತಾಗಿ ಕಾರಿನಲ್ಲಿ‌ ಓಡಿಬಂದು ಕೂತರೆ, ಪಾರ್ಕ್‌ ಮಾಡಿದ ಕಾರು ಇನ್ನೂ‌ ಬಿಸಿ. ಕಾರಿನ ಎಸಿ ಯಾವ ಲೆಕ್ಕಕ್ಕೂ‌ಇಲ್ಲ. ಎಸಿ ಬ್ಲೋವರ್ 4 ರಲ್ಲಿ‌ ಇಟ್ಟರೂ ಬಿಸಿ ಗಾಳಿಯೆ. ಆದರೂ ಅಲ್ಲಿಯ ಜನ ಗಮ್ ಚಾ ತಲೆ‌ ಮುಖಕ್ಕೆ ಸುತ್ತಿಕೊಂಡು ತಮ್ಮ ಕೆಲಸದಲ್ಲಿ ‌ನಿರತರಾಗಿದ್ದರು.

ಇಂತಹ ಬಿಸಿಲಿನ ಬೇಗೆಯಲ್ಲಿ ವಿಂದ್ಯಾಚಲ ತಲುಪಿದೆ. ಇಲ್ಲಿಂದ ವಿಂದ್ಯವಾಸಿನಿ ಮಾ ಇರುವ ದೇವಸ್ಥಾನಕ್ಕೆ‌‌ ಹೋಗಲು ಸುಮಾರು 150 ಮೀಟರ್ ಏರು ಹತ್ತಿಹೋಗಬೇಕು. ಈ ದಾರಿಯ ಎರಡೂ ಬದಿಗಳಲ್ಲಿ ಅಂಗಡಿಗಳ ಸಾಲು. ಹೆಚ್ಚಿನ ಅಂಗಡಿಗಳಲ್ಲಿ ವಿಧ ವಿಧವಾದ ಗಮ್ ಚಾ ದೊರೆಯುತ್ತವೆ. ದೇವಿಗೆ ಬಟ್ಟೆ ಯನ್ನು(ಚುನರಿ) ಅರ್ಪಿಸುವುದು ಇಲ್ಲಿನ ವಿಶೇಷ. ಅಂಗಡಿಗಳ ತಾತ್ಕಾಲಿಕ ಮಾಡಿನಿಂದಾಗಿ ನೆಡೆಯುವ ಹಾದಿಯುದ್ದಕ್ಕೂ ನೆರಳಿದೆ. ಇನ್ನೇನು ತಲುಪುತ್ತೇವೆ‌ ಎನ್ನುವಷ್ಟರಲ್ಲಿ‌, ಅಂಗಡಿಯ ಜನರು ಚಪ್ಪಲಿ‌ ತಮ್ಮ ಅಂಗಡಿಯಲ್ಲೇ ಬಿಡುವಂತೆ‌‌ ಪೀಡಿಸುತ್ತಾರೆ. ಚಪ್ಪಲಿ ಬಿಟ್ಟಿದ್ದಕ್ಕೆ ಹಣ ಕೊಡಬೇಕಾಗಿಲ್ಲ ಆದರೆ ದೇವಿಗೆ ಸಮರ್ಪಿಸಬಹುದಾದಂತ ಚುನರಿ, ಹಣ್ಣು, ಕಾಯಿ, ಬಾಗಿನ  ಹಾಗು ಇನ್ನಿತರ ಸಾಮಾನುಗಳನ್ನು ಆತನಲ್ಲಿಯೇ ಕೊಳ್ಳಬೇಕು. ಆತನಲ್ಲಿ ಇಂತಹ ಸಾಮಾನುಗಳ ಸೆಟ್ ರೆಡಿ ಇರುತ್ತದೆ. ನಾನು ಮೊದಲನೆ ಸಲ ಹೋಗುತ್ತಿರುವದರಿಂದ ಅವರ ಉರುಳಿಗೆ ಸಿಲುಕಿದೆ. ಶೂ ಬಿಡಲು ಮುಂದೆ ವ್ಯವಸ್ಥೆ ಇರಲಾರದೆಂದು, ಒಂದು ಅಂಗಡಿಯಲ್ಲಿ ಶೂ ಬಿಚ್ಚಿದೆ. ಆತ ಕೈ ತೊಳೆಯಲು ನೀರನ್ನು ನೀಡಿ, ನನ್ನ ಕೈ ಗೆ ಸೆಟ್ ಇಟ್ಟು 101 ರೂಪಾಯಿ ಬರ್ತಾ ಕೊಟ್ಟು ಬಿಡಿ‌ ಎಂದ. 1-2 ರೂಪಾಯಿಯಲ್ಲಿ‌  ಆಗುವ ಕೆಲಸಕ್ಕೆ 1೦1 ರೂಪಾಯಿ ತೆರಬೇಕಾಯ್ತು. 

ದರ್ಶನವೆಂಬ ಬಿಸಿನೆಸ್ 
ಪ್ರಸಾದದ ಸೆಟ್ ಹಿಡಿದು ದೇವಸ್ಥಾನದ ಮೆಟ್ಟಿಲು ಏರುತ್ತಿರುವಂತೆ ಇಬ್ಬರು ಪಂಡರು ‌ಎದುರಾದರು. ಇವರು ಹೇಗೆ‌ ನಮ್ಮಿಂದ ಹಣ ದೋಚುತ್ತಾರೆ ಎಂದು ಕಾಶಿಯಲ್ಲಿ‌ ನೋಡಿದ್ದರಿಂದ ಆದಷ್ಟೂ ಇವರನ್ನು ಅವಾಯ್ಡ್ ಮಾಡಲು ಪ್ರಯತ್ನಿಸಿದೆ. ನೇರ ಹೋಗಿ ಎದುರಿಗಿದ್ದ ಕ್ಯೂನಲ್ಲಿ ನಿಂತೆ. ಆಚೆ ಇನ್ನೆರಡು ದೊಡ್ಡ ಕ್ಯೂ ಕಾಣಿಸಿತು. ನಾ ನಿಂತ ಕ್ಯೂ ಯಾವುದೋ ಉಪ ದೇವತೆಯಾಗಿರಬಹುದು ಮತ್ತು ಮುಖ್ಯ ದೇವರ ಗುಡಿ ಆಚೆ ಇರಬಹುದೆಂದುಕೊಂಡೆ. ಒಬ್ಬ ಪಂಡ ನನ್ನ ಹಿಂದೆಯೇ ಇದ್ದ. ಜನ ಜಾಸ್ತಿ ಇದ್ದದರಿಂದ ಆತನಲ್ಲಿ ದರ್ಶನ ಮಾಡಿಸಿ, ಪ್ರಸಾದ‌ ಅರ್ಪಿಸಿ ಕೊಡುವುದಾದರೆ ಐವತ್ತು ರೂಪಾಯಿ ಕೊಡುವುದಾಗಿ ಹೇಳಿದೆ. ಖುಷಿಯಿಂದ ಒಪ್ಪಿಕೊಂಡ. ನನ್ನ ಕ್ಯೂನಲ್ಲಿ ಮುಂದೆ ಇಬ್ಬರಿದ್ದರು. ಪಂಡನೂ ನನ್ನ ಮತ್ತು ಇವರ ಮಧ್ಯೆ ತೂರಿಕೊಂಡ. ನನ್ನ ಕೈಲಿದ್ದ ಪ್ರಸಾದದ ಸೆಟ್ ಆತನೇ ಹಿಡಿದುಕೊಂಡ. ಕೇವಲ ಐದೇ ನಿಮಿಷಗಳಲ್ಲಿ ಬಲ ಭಾಗದಲ್ಲಿರುವ ದೇವಿಯ ದರ್ಶನವಾಯಿತು. ಅಲ್ಲಿಯೇ ಇರುವ ಇನ್ನೊಬ್ಬ‌ ಪಂಡ ನಾನು ದರ್ಶನ ಮಾಡುತ್ತಿರುವಂತೆ, ಆರತಿ ಎತ್ತಿ ಕಾಣಿಕೆ ಕೇಳಿದ‌. 10ರೂ ನೀಡಲು ಮುಂದಾದೆ, ಆತ ಇಷ್ಟೇಯಾ ಅನ್ನುವಂತೆ‌ ಮುಖ ಮಾಡಿದ. ನಾನು ಆಗುವುದಿಲ್ಲ, ಇಷ್ಟೇ ‌ಎಂದೆ. ಆತ 10ರೂ ತೆಗೆದು ಕೊಳ್ಳದೆ, ದೊಡ್ಡಸ್ತಿಕೆ‌ ತೋರಿಸಿದ. ನಾನು‌ ಒಂದು ಹೆಜ್ಜೆ ಮುಂದಿಡುವಷ್ಟರಲ್ಲಿ ಇನ್ನೊಬ್ಬ ಚಿಕ್ಕ ಪ್ರಾಯದ ಪಂಡ, ನನ್ನ ಹಣೆ ತುಂಬ ಕುಂಕುಮ ಬಳಿದು, ಆ ಹತ್ತು ರೂಪಾಯಿ ಕೇಳಿದ. ಕೊಟ್ಟಿದ್ದೆ ತಡ, ಅಲ್ಲೆ ಮುಂದಿದ್ದ ಇನ್ನೊಬ್ಬನೂ ಹಣೆಗೆ ಕುಂಕುಮ ಬಳಿಯಲು ಮುಂದಾದ. ಬೇಡವೆಂಬಂತೆ ಆತನ ಕೈ ಹಿಡಿದು ದೂಡಿ ಮುನ್ನೆಡೆದೆ. ಇಷ್ಟೆಲ್ಲಾ ಕೇವಲ ಎರಡು ಮೂರು ನಿಮಿಷದಲಿ ನೆಡೆದಿರಬಹುದು. ಮೊದಲನೇ ಪಂಡ ನನ್ನ ಹಿಂದೆಯೇ ಇದ್ದ. ನಾನು ತಂದ ಪ್ರಸಾದ ಸೆಟ್ ಅನ್ನು ಹಿಂತಿರುಗಿಸಿ, ಹೇಳಿದಂತೆ 50 ರೂಪಯಿ ಕೊಡಿಯೆಂದು ಕೇಳಿದ. ನಾನು ಆಶ್ಚರ್ಯದಿಂದ "ಹೋ ಗಯಾ" ಎಂದು ಕೇಳಿದೆ. ಆತ ಮುಗುಳ್ನಗುವೊಂದಿಗೆ ಹೂಂ ಎಂದ. ನಾನು ದರ್ಶನ ಮಾಡಿದ ದೇವಿಯೆ ಅಲ್ಲಿನ ಮುಖ್ಯ ದೇವತೆಯಾದ ವಿಂಧ್ಯವಾಸಿನಿ ದೇವಿ ಎಂದು ಆಗಲೇ ನನಗೆ ಫ್ಲಾಶ್ ಆಗಿದ್ದು. ಸಿಟ್ಟು ನೆತ್ತಿಗೇರಿ ಇಷ್ಟಕ್ಕೆ ನಾನು 50 ರೂ ಕೊಡುವುದಿಲ್ಲ ಎಂದೆ. ಆತ ದೇವರ ಭಯ ತೋರಿಸಿದ್ದರಿಂದ ಹಣ ಕೊಡಲೇ ಬೇಕಾಯಿತು. ನಂತರ ದೇವಸ್ಥಾನಕ್ಕೆ ಒಂದು ಸುತ್ತು ಬಂದಾಗ, ಆ ಸಮಯದಲ್ಲಿ ದೇವಸ್ಥಾನದ ಬಾಗಿಲು ಮುಚ್ಚಿದ್ದರಿಂದ ಅಲ್ಲಿ ಜನರು ಮಾತೆಯ ದರ್ಶನಕ್ಕಾಗಿ ಗರ್ಭಗುಡಿಯ ಒಳಗೆ ಹೋಗಲು ಕಾಯುತ್ತಿದ್ದಾರೆಂದು ತಿಳಿಯಿತು. ಆ ಪಂಡ ನನಗೆ ಕಿಟಕಿಯಿಂದಲೇ ಮಾತೆಯ ದರ್ಶನ ಮಾಡಿಸಿ   50ರೂ ಕಿತ್ತುಕೊಂಡಿದ್ದ.

ಇಂತಹ ಜಾಗದಲ್ಲಿ, ಈ ರೀತಿಯಲ್ಲಿ ದೇವರ ದರ್ಶನ ಮಾಡಿದ್ದರಿಂದ ಯಾವ ಫಲ ಇದೆಯೋ. ಹೇಗೋ ಕಷ್ಟದಿಂದ ಆ ಸ್ಥಳದಲ್ಲಿರುವ ದೇವತೆಯ ದರ್ಶನ ಮಾಡುವುದು ಮುಖ್ಯವೋ ಅಥವಾ ದೂರದಿಂದ, ಶುದ್ಧ ಮನಸ್ಸಿನಿಂದ ಭಕ್ತಿಯ ಪ್ರಾರ್ಥನೆ ಅರ್ಪಿಸುವುದು ಒಳಿತೋ ತಿಳಿಯಲ್ಲಿಲ್ಲ. ನಂತರ ಕ್ಯೂ ನಲ್ಲಿ ಕಾದು ಇನ್ನೊಮ್ಮೆ ಆ ಮಾತೆಯ ದರ್ಶನ  ಮಾಡಿಕೊಂಡು ಬಂದೆ.

ಆಮ್ ಪನ್ನಾ  

ಆ ಬಿಸಿಲಿನ ಬೇಗೆಯಿಂದ ಬಸವಳಿದವರಿಗೆ ಆಮ್ ಪನ್ನಾ ಎಂಬ ಈ ಪೇಯ ಓಯಸಿಸ್ ನಂತೆ. ಬೇಯಿಸಿದ ಮಾವಿನ ಕಾಯಿ, ಪುದಿನ ಚಟ್ನಿಯಿಂದ ತಯಾರಾಗುವ ಈ ಪೇಯ ರಸ್ತೆ ಬದಿಯ ಗಾಡಿಯಲ್ಲಿ ಕಂಡಾಗ ಮನಸ್ಸು ತಡೆಯಲಿಲ್ಲ, ಯಾವ ನೀರು ಉಪಯೋಗಿಸಿರುತ್ತಾರೋ ಎಂಬ ಅನುಮಾನವಿದ್ದರೂ, ಮೊದಲು ಬದುಕುವುದು ಮುಖ್ಯವೆಂದು ಎರಡು ಗ್ಲಾಸ್ ಗಟಕಿಸಿದೆ. ಕೊಂಚ ಹುಳಿ ರುಚಿ ಹೊಂದಿರುವ ಈ ಪೇಯ ಉತ್ತಮ ಜೀರ್ಣಕಾರಿ ಎಂದು ತಿಳಿದೆ. ದರ್ಶನದ ಕಹಿ ನೆನಪನ್ನು ಅಲ್ಲಿಯೇ ಬಿಟ್ಟು ವಾರಾಣಸಿ ಕಡೆ ಹೊರಟೆ. 

ರಬಡಿ - ಪೇಡ 
rabdi, peda
mirzapur
ರಬಡಿ
ಮಿರ್ಜಾಪುರದಿಂದ ವಾರಣಾಸಿ ಕಡೆಗೆ ಹೋಗುವ ದಾರಿಯ ಬದಿಯಲ್ಲಿ ರಬಡಿ ಮತ್ತು ಪೇಡ ಮಾರುವ ಸಾಲು ಸಾಲು ಅಂಗಡಿಗಳಿವೆ. ಕ್ಯಾಬ್ ಚಾಲಕ, ಹಾಲಿನಿಂದ ತಯಾರಾಗುವ ಈ ಸಿಹಿ ತಿನಿಸುಗಳು ಇಲ್ಲಿ ತುಂಬಾ ತಾಜಾ ವಾಗಿರುತ್ತವೆ ಮತ್ತು ಇವುಗಳು ಇಲ್ಲಿಯ ವಿಶೇಷವೆಂದು ಹೇಳಿದಾಗ ಹಾಗೂ ಸಿಹಿ ತಿಂಡಿಗಳು ನನ್ನ ದೌರ್ಬಲ್ಯ ವಾಗಿರುವುದರಿಂದ ಕೂಡಲೇ ನಿಲ್ಲಿಸಲು ಸೂಚಿಸಿದೆ. ಹಾಲನ್ನು ಕಾಯಿಸಿ ಮಾಡುವ ಈ ತಿಂಡಿ ತಾಜಾ ತಿಂದರೆ ರಬಡಿ, ಬಾಣಲೆಯಲ್ಲಿ ಒಣಗಿಸಿದರೆ ಪೇಡ. ರಬಡಿಯನ್ನು ಅಲ್ಲೇ ತಿಂದು, ಕಾಲು ಕೆಜಿ ಪೇಡ ಕಟ್ಟಿಸಿಕೊಂಡೆ. ಅಂತಹ ಅದ್ಭುತ ರುಚಿಯೇನೂ ಇರಲಿಲ್ಲ ಅಥವಾ ನನ್ನ ರುಚಿ ಮೆಚ್ಚುಗೆಯ ಅನುಭವಕ್ಕೆ ಹಿಡಿಸಲಿಲ್ಲವೆನ್ನಬಹುದು.  ಶುಚಿತ್ವ ಕೂಡ ಅಷ್ಟಕ್ಕಷ್ಟೇ. ಅಲ್ಲಿಂದ ವಾರಣಾಸಿಯಲ್ಲಿರುವ ಹೋಟೆಲ್ ಸೇರುವಾಗ ಸುಸ್ತಾಗಿತ್ತು.