Monday, September 22, 2014

ದೇವರ ಹೆಸರನ್ನೂ ಬದಲಾಯಿಸಬಹುದೇ?

ಈ ವರ್ಷದ ಗಣೇಶ ಚತುರ್ಥಿಗೆ ಊರಿಗೆ ಹೋದಾಗ ನನಗೊಂದು ಅಚ್ಚರಿ ಕಾದಿತ್ತು. ನಮ್ಮೂರಿನ ಗಣಪತಿ ದೇವಸ್ಥಾನದಲ್ಲಿ ಪ್ರತಿ ವರ್ಷ ನಡೆಯುವ ಸಾರ್ವಜನಿಕ ಗಣೇಶೋತ್ಸವದ ಆಹ್ವಾನ ಪತ್ರಿಕೆ ನಮ್ಮನೆಗೂ ಬಂದಿತ್ತು. ಆದರೆ ಈ ಬಾರಿಯ ಆಹ್ವಾನ ಪತ್ರಿಕೆಯಲ್ಲಿ ದೇವಸ್ಥಾನದ ಹೆಸರು "ಶ್ರೀ ಲಕ್ಷ್ಮೀಗಣಪತಿ ದೇವಾಲಯ" ಎಂದಿತ್ತು. ಇದನ್ನು ನೋಡಿ ಇದು ನಮ್ಮದೇ ದೇವಸ್ಥಾನದ್ದ ಅಂತ ಅನುಮಾನವಾಯಿತು. ಚಿಕ್ಕಪ್ಪನ ಮಗನ ಹತ್ತಿರ ಕೇಳಿ ಇನ್ನೊಮ್ಮೆ ಖಾತರಿ ಪಡಿಸಿಕೊಂಡೆ. ಹೌದು, ಇದು ಮಹಾಗಣಪತಿ ದೇವಸ್ಥಾನ ಎಂದು ಕರೆಸಿಕೊಳ್ಳುತ್ತಿದ್ದ ನಮ್ಮೂರ ದೇವಸ್ಥಾನದ್ದೆ. ನಾನು ಹುಟ್ಟಿದಾಗಿಂದಲೂ ಅಥವಾ ಅದಕ್ಕಿಂತಲೂ ಬಹಳ ಹಿಂದಿನಿಂದಲೂ ನಮ್ಮೂರ ದೇವಸ್ಥಾನದ ಹೆಸರು ಮಹಾಗಣಪತಿ ದೇವಸ್ಥಾನ, ಮಟ್ನಕಟ್ಟೆ ಎಂದಾಗಿದೆ. ನಿಸ್ಸಂದೇಹವಾಗಿ "ಮಹಾಗಣಪತಿ" ದೇವರ ದೇವಸ್ಥಾನವಾದ್ದರಿಂದ  ಆ ಹೆಸರು.  ನಾನು ನಂಬಿಕೊಂಡು ಬಂದ ಮಹಾಗಣಪತಿ ದೇವರ ಹೆಸರು ಒಮ್ಮೆಲೇ "ಶ್ರೀ ಲಕ್ಷ್ಮೀಗಣಪತಿ" ಎಂದಾಗಿದೆ ಎಂಬ ವಿಷಯವನ್ನು ಅರಗಿಸಿಕೊಳ್ಳಲಾಗಲಿಲ್ಲ.

ಚಿಕ್ಕಂದಿನಿಂದಲೂ ನನಗೆ ದೇವರನ್ನು ನೆನಪಿಸಿಕೊಬೇಕೆನಿಸಿದಾಗೆಲ್ಲ ಮೊದಲು ಬಾಯಿಗೆ ಬರುವುದು ಮಹಾಗಣಪತಿ ಎಂದು. ಬೆಳಿಗ್ಗೆ ಎದ್ದ ಕೂಡಲೇ ಅಥವಾ ಯಾವುದೇ ಮುಖ್ಯ ಕಾರ್ಯಕ್ಕೆ ತೊಡಗುವ ಮೊದಲು ಆ ಮಹಾಗಣಪತಿಯ ಹೆಸರು ಹೇಳಿ ಸ್ಮರಿಸುತ್ತೇನೆ. ಈಗ ನಾನು ಹೊತ್ತಿಗೂ ಸ್ಮರಿಸಿಕೊಳ್ಳುವ ಮಹಾಗಣಪತಿ ಎಂಬ ದೇವರ ನಾಮ ಅಸ್ತಿತ್ವ ದಲ್ಲಿಯೇ ಇರಲಿಲ್ಲ.

ಮಟ್ನಕಟ್ಟೆಯಲ್ಲಿರುವ ದೇವರ ಮೂರ್ತಿಯು ದಶಭುಜಗಳನ್ನು ಹೊಂದಿರುವ ಗಣಪತಿ ವಿಗ್ರಹವಾಗಿದೆ. ಮೂರ್ತಿಯ ಎಡ ತೊಡೆಯ ಮೇಲೆ ಲಕ್ಷ್ಮಿ ಆಸೀನಳಾಗಿದ್ದಾಳೆ.  ಮೂಲ ಮೂರ್ತಿಯು ಪಂಚಲೋಹದ್ದಾಗಿದೆ. ದಶಭುಜಗಳಲ್ಲಿಯೂ ವಿವಿದ ಆಯುಧಗಳನ್ನು ಹಿಡಿದುಕೊಂಡಿದೆ. ನಾನು ಈ ರೀತಿಯಲ್ಲಿರುವ ಎಲ್ಲ ಗಣಪತಿ ಮೂರ್ತಿಯನ್ನು "ಮಹಾಗಣಪತಿ" ಎಂದು ಕರೆಯುತ್ತಾರೆ ಎಂದೆಣಿಸಿಕೊಂಡಿದ್ದೆ. ಬೆಂಗಳೂರಿನ ರಾಗಿಗುಡ್ಡ ದೇವಸ್ಥಾನದಲ್ಲಿರುವ ಗಣಪತಿ ಮೂರ್ತಿಯೂ ಇದೇ ರೀತಿಯಲ್ಲಿದೆ ಮಾತ್ರವಲ್ಲ "ಮಹಾಗಣಪತಿ" ಎಂದೇ ಕರೆಯುತ್ತಾರೆ. ಇದನ್ನು ನೋಡಿದ ಮೇಲಂತೂ ಮಹಾಗಣಪತಿ ಎಂದರೆ ಇದೇ ರೀತಿಯಿರುತ್ತದೆ ಎಂದು ನನಗೆ ಖಚಿತವಾಗಿತ್ತು.

ನಮ್ಮೂರಿನ  ದೇವಸ್ಥಾನದ ಆಡಳಿತ ಮಂಡಳಿ ಇತ್ತೀಚಿಗೆ ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ಕೈಗೆತ್ತಿಕೊಂಡಿದೆ. ದೇವಸ್ಥಾನದ ಗರ್ಭಗುಡಿಯನ್ನು ಸಂಪೂರ್ಣ ಶಿಲಾಮಯವಾಗಿಸುವುದು ಮತ್ತು ಸುತ್ತಲೂ ಪೌಳಿಯನ್ನು ನಿರ್ಮಿಸುವುದು ಇವರ ಯೋಜನೆ. ದೇವಸ್ಥಾನದ ಜೀರ್ಣೋದ್ಧಾರ ಕೆಲಸವನ್ನು ಕೈಗೆತ್ತಿಕೊಂಡಾಗ ಮೊದಲು ಮಾಡುವ ಕೆಲಸವೆಂದರೆ ಅಷ್ಟಮಂಗಲ ಅಥವಾ ಆರೂಢ ಪ್ರಶ್ನೆ ಇಟ್ಟು ದೇವಸ್ಥಾನದ ಮೂಲ, ದೈವೀಕ ಶಕ್ತಿ ಮುಂತಾದ ಹಲವು ವಿಷಯಗಳ ಬಗ್ಗೆ ತಿಳಿದು ಅದರಂತೆ ನೆಡಿಯುವುದು ಕ್ರಮ.  ಹಾಗೆ ನಮ್ಮೂರ ದೇವಸ್ಥಾನದಲ್ಲೂ ಆರೂಢ ಪ್ರಶ್ನೆ ನಡೆದಿತ್ತು.

ಸಾರ್ವಜನಿಕ ಗಣೇಶೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಸಾರ್ವಜನಿಕರಿಗೆ ಮಾಡಿದ ವಿಜ್ಞಾಪನೆಯ ಪ್ರಕಾರ ಜೀರ್ಣೋದ್ಧಾರಕ್ಕೆ ಮುನ್ನ ನಡೆದ ಆರೂಢ ಪ್ರಶ್ನೆಯಲ್ಲಿ ಮಟ್ನಕಟ್ಟೆಯಲ್ಲಿರುವ ದೇವರ ಹೆಸರು "ಲಕ್ಷ್ಮೀಗಣಪತಿ" ಎಂಬುದಾಗಿ ತಿಳಿದು ಬಂದಿದೆ ಹಾಗೂ ಅದರಂತೆ ದೇವಾಲಯದ ಹೆಸರನ್ನು "ಶ್ರೀ ಲಕ್ಷ್ಮೀಗಣಪತಿ ದೇವಾಲಯ" ಎಂದು ಮರು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದ್ದರು.

ವಿಜ್ಞಾಪನೆಯಲ್ಲಿ ತಿಳಿಸಿರುವಂತೆ ಕೇವಲ ಆರೂಢ ಪ್ರಶ್ನೆಯ ಆಧಾರದ ಮೇಲೆ ಈ ಮರುನಾಮಕರಣ ನಡೆದಿಲ್ಲವೆಂದು ನನಗನ್ನಿಸುತ್ತದೆ. ಲಕ್ಷಿ ಎಂಬುದು ಧನ ಕನಕ ಐಶ್ವರ್ಯಾದಿಗಳನ್ನು ನೀಡುವ ದೇವತೆ. ಎಲ್ಲದಕ್ಕಿಂತಲೂ ಹಣವೇ ಮೇಲು, ದುಡ್ಡಿದ್ದರೆ ಎಲ್ಲ ಇದ್ದಂತೆ ಎಂಬ ವಿಚಾರ ದಿನದಿಂದ ದಿನಕ್ಕೆ ದೃಢಗೊಳ್ಳುತ್ತಿರುವ ಇಂದಿನ ಸಮಾಜದಲ್ಲಿ ಐಶ್ವರ್ಯ ನೀಡುವ ಲಕ್ಷ್ಮಿಗೆ ಬೇಡಿಕೆ ಇರುವುದಂತೂ ಖಂಡಿತ.  ಆದ್ದರಿಂದ ಮಹಾಗಣಪತಿಯನ್ನು ಲಕ್ಷ್ಮೀಗಣಪತಿ ಎಂದು ಹೆಸರಿಸಿದರೆ ಭಕ್ತರ ಸಂಖ್ಯೆ ಹಾಗೆ ದೇವಳದ ಆದಾಯವನ್ನು ಹೆಚ್ಚಿಸಬಹುದೆಂಬುದು ಆಡಳಿತ ಮಂಡಳಿಯ ನಿರೀಕ್ಷೆಯಾಗಿರಬಹುದು. ಹೇಗಿದ್ದರೂ ಲಕ್ಷ್ಮೀ ಕೂಡ ಇದೆಯಲ್ಲಾ!

ಜನರ ಹೆಸರನ್ನು ಬದಲಿಸಬೇಕಾದರೆ ಅದೇನೇನೋ ಕಾನೂನು ಕ್ರಮಗಳನ್ನು ಅನುಸರಿಸಬೇಕು ಹಾಗಿದ್ದರೆ ದೇವರ ಹೆಸರನ್ನು ಬದಲು ಮಾಡಲು ಯಾವುದೇ ಸರ್ಕಾರಿ ಅಥವಾ ಕಾನೂನು ನಿಯಮಗಳಿಲ್ಲವೇ? ಗೊತ್ತಿಲ್ಲ. ಮಟ್ನಕಟ್ಟೆ ಮಹಾಗಣಪತಿ ದೇವಸ್ಥಾನ ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ (ಮುಜರಾಯಿ) ಸೇರಿದೆ. ಈ ದೇವಾಲಯದ ಆಡಳಿತ ಮೊಕ್ತೇಸರರು  ನನ್ನ ಚಿಕ್ಕಪ್ಪನವರಾಗಿದ್ದರೆ. ಅವರಲ್ಲಿ ನಾನು ಈ ವಿಚಾರವನ್ನು ಕೇಳಿದೆ. ಧಾರ್ಮಿಕ ದತ್ತಿ ಇಲಾಖೆಯಲ್ಲಿ ಮಟ್ನಕಟ್ಟೆ ದೇವಸ್ಥಾನವು ವಿನಾಯಕ ದೇವಸ್ಥಾನವೆಂದು ನೊಂದಣಿಗೊಂಡಿದೆಎಂದರು. ಅಬ್ಬ! ಮತ್ತೊಂದು ಹೆಸರು. ಅಧಿಕೃತವಾಗಿ ದೇವರ ಹೆಸರನ್ನು ಬದಲಾವಣೆ ಮಾಡುವ ಬಗ್ಗೆ ಅವರಲ್ಲಿ ಮಾಹಿತಿ ಇರಲಿಲ್ಲ.

ಆಶ್ಚರ್ಯವೆಂದರೆ "ಶ್ರೀ ಲಕ್ಷ್ಮೀಗಣಪತಿ" ಎಂಬ ಮರುನಾಮಕರಣದ  ಬಗ್ಗೆ ಆಡಳಿತ ಮೊಕ್ತೇಸರರಾದ ನಮ್ಮ ಚಿಕ್ಕಪ್ಪನವರಿಗೆ ತಿಳಿದಿರಲಿಲ್ಲ . ಇದು ಹೇಗೆ ಸಾಧ್ಯ?  ದೇವಾಲಯದ ಆಡಳಿತ ಮಂಡಳಿ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ಬೇರೆ ಬೇರೆ. ಕೆಲವರು ಎರಡರಲ್ಲೂ ಇದ್ದಾರೆ. ಚಿಕ್ಕಪ್ಪನವರು ಗಣೇಶೋತ್ಸವ ಸಮಿತಿಯಲ್ಲಿಲ್ಲ . ಸಮಿತಿಯವರು ಚೌತಿಗೆ ಮುನ್ನ ಕರೆದ ಸಭೆಯಲ್ಲಿ ನಮ್ಮ ಚಿಕ್ಕಪ್ಪ ಕಾರಣಾಂತರಗಳಿಂದ ಭಾಗವಹಿಸಿರಲಿಲ್ಲ. ಇದೇ ಸಭೆಯಲ್ಲಿ ಮರುನಾಮಕರಣದ ನಿರ್ಣಯವನ್ನು ತೆಗೆದುಕೊಂಡು ಅದರಂತೆ ಆಹ್ವಾನ ಪತ್ರಿಕೆಯನ್ನೂ ಮುದ್ರಿಸಿದ್ದರು.

ಸಹಜವಾಗಿಯೇ ವಿಷಯ ತಿಳಿದ ನಮ್ಮ ಚಿಕ್ಕಪ್ಪ ನನ್ನಂತೆ ಚಕಿತರಾಗಿದ್ದರು. ಅವರು ಮರುನಾಮಕರಣಕ್ಕೆ ವಿರೋಧ ವ್ಯಕ್ತ ಪಡಿಸಿ, ವಿದ್ವಾಂಸರ ಅಭಿಪ್ರಾಯ ಪಡೆದು ಹೀಗೆ ಮರುನಾಮಕರಣ ಮಾಡುವುದು ಸರಿಯಲ್ಲ ಎಂದು ಚೌತಿಯ ನಂತರ ಮತ್ತೊಂದು ಸಭೆಯನ್ನು ಕರೆದು ಮರುನಾಮಕರಣವನ್ನು ಕೈಬಿಟ್ಟರು. ಇದಕ್ಕೆ ದೇವಾಲಯದ ಅರ್ಚಕರ ಬೆಂಬಲವೂ ಅವರಿಗೆ ದೊರಕಿತ್ತು.

ಇನ್ನು ಧಾರ್ಮಿಕ ದತ್ತಿ ಇಲಾಖೆಯಲ್ಲಿ ನೊಂದಯಿತವಾದ ವಿನಾಯಕ ದೇವಸ್ಥಾನ ಎಂಬ ಹೆಸರಿನ ವಿಚಾರ. ನಾನು ಬೆಂಗಳೂರಿಗೆ ಬಂದ ನಂತರ ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ವೆಬ್ ಸೈಟ್ ನಲ್ಲಿ ಕೊಟ್ಟಿರುವ ಸುಮಾರು ೩೫೦೦೦ ದೇವಸ್ಥಾನಗಳ ಪಟ್ಟಿಯಲ್ಲಿ ನಮ್ಮ ದೇವಸ್ಥಾನದ ಮಾಹಿತಿ ಹುಡುಕಿದೆ. ಅದರಲ್ಲಿ ಮಹಾಗಣಪತಿ ದೇವಸ್ಥಾನ ಎಂದೇ ಇದೆ. ಮಟ್ನಕಟ್ಟೆ ಎನ್ನುವ ಬದಲು ಮಾತಿನಕಟ್ಟೆ ಎಂದಾಗಿದೆ ಅಷ್ಟೇ.

ಕೊನೆಗೂ ನಾನು ನಂಬಿಕೊಂಡು ಬಂದಿರುವ ಮಹಾಗಣಪತಿ, ಮಹಾಗಣಪತಿಯೆಂದೇ  ಉಳಿದು ಕೊಂಡಿರುವುದು ಸಂತಸದ ಸಂಗತಿ . ಇಲ್ಲಾಂದ್ರೆ ಮಹಾಗಣಪತಿ ಎಂದು ನಾನು ಸ್ಮರಿಸುವ ಅಭ್ಯಾಸವನ್ನು ಬದಲು ಮಾಡಿಕೊಳ್ಳಲು ಎಂದಿಗೂ ಸಾಧ್ಯವಾಗುತ್ತಿರಲಿಲ್ಲ. ಒಂದು ವೇಳೆ ದೇವರ ಹೆಸರನ್ನು ಬದಲಾಯಿಸಿದ್ದರೆ ನಾನು ಸ್ಮರಿಸುವ " ಮಹಾಗಣಪತಿ" ಎಂಬ ನಾಮ ನನ್ನ ಮನಸಿನ್ನಲ್ಲಿರುವ ಮಟ್ನಕಟ್ಟೆ ಮಹಾಗಣಪತಿಗೆ ಸಲ್ಲುವುದಿಲ್ಲವೇನೋ ಎಂಬ ಕೊರಗು ಸದಾ ಇರುತ್ತಿತ್ತು. 

ದೇವರಿಗೆ ಸಹಸ್ರಾರು ನಾಮಗಳಿರುವುದು ಸಹಜ ಆದರೆ ನಮ್ಮ ಮನಸ್ಸಿನಲ್ಲಿರುವ ದೇವರು ಒಂದು ವಿಗ್ರಹ, ಚಿತ್ರ ಅಥವಾ ಇನ್ನಾವುದೋ ದೈಹಿಕ ಸ್ವರೂಪ ಪಡೆದಾಗ ಆ ನಿರ್ಧಿಷ್ಟ ರೂಪದ ದೇವರು ಒಂದೇ ಹೆಸರಿನಿಂದ ಕರೆಯಿಸಿಕೊಳ್ಳುತ್ತದೆ . ಉದಾಹರಣೆಗೆ ಕೊಲ್ಲೂರ ಮೂಕಾಂಬಿಕೆ, ಧರ್ಮಸ್ಥಳದ ಮಂಜುನಾಥ ಅಥವಾ ಕಾಶಿ ವಿಶ್ವನಾಥ ಹೀಗೆ. ಮಂಜುನಾಥ ಮತ್ತು ವಿಶ್ವನಾಥ ಎರಡೂ ಶಿವನ ನಾಮವಾದರೂ ಧರ್ಮಸ್ಥಳದಲ್ಲಿರುವ ದೇವರು ವಿಶ್ವನಾಥ ನಾಗಲಾರದು ಹಾಗೆ ಕಾಶಿಯಲ್ಲಿರುವ ದೇವರು ಮಂಜುನಾಥನೆನಿಸಿಕೊಳ್ಳದು. ಈ ಎರಡೂ ದೇವಾಲಯಗಳು ಶಿವನದ್ದೆ ಆದರೂ ಇದನ್ನು ನಂಬಿಕೊಳ್ಳುವ ಭಕ್ತರು ಬೇರೆ ಬೇರೆ. 

ಈ ರೀತಿ ಒಂದು ಮೂರ್ತಿ ಸ್ವರೂಪದಲ್ಲಿರುವ ದೇವರ ಹೆಸರನ್ನೇ ಬದಲಿಸಬಹುದೇ ? ಬದಲಿಸಬಹುದಾದರೆ ವರ್ಷಾಂತರಗಳಿಂದ ನಂಬಿಕೊಂಡು ಬಂದಿರುವ ಭಕ್ತರ ಮನಸ್ಸಿನಲ್ಲಾಗುವ ಪರಿಣಾಮಗಳೇನು? ಆ ಭಕ್ತರ ನಂಬಿಕೆಯ ಪಾಡೇನು?

 "ನಂಬಿಕೆಯೇ ದೇವರು"  ಎಂಬ ಮಾತು ಎಷ್ಟು ಸಮಂಜಸವಾಗಿದೆ ಎನ್ನಿಸುತ್ತಿದೆ .

**************************************************
http://karnatakatemples.kar.nic.in/homepage/index.jsp

Name of revenue district: Udupi
Name of the taluk: Kundapura
Name of Village: Kergalu
Sl. no. of Institution: 249
Name of the Hindu Religious Institutions and Charitable Instituions: Maathinakatte Mahaganapathi Devasthna



No comments:

Post a Comment