Showing posts with label Achuta hebbar jambe. Show all posts
Showing posts with label Achuta hebbar jambe. Show all posts

Saturday, September 27, 2014

ಒಪ್ಪಾನೆ - ಮೂರು ಕಾಸು

ನಮ್ಮ ಅಜ್ಜನವರಾದ ದಿ।। ಜಂಬೆ ಅಚ್ಯುತ ಹೆಬ್ಬಾರರು ೧೯೯೦ ರ ದಶಕದ ಉತ್ತರಾರ್ಧದಲ್ಲಿ  ಬರೆದಿರುವ ಈ ಲೇಖನವನ್ನು ಯಥಾವತ್ತಾಗಿ ಅವರ ಹಸ್ತಪ್ರತಿಯಲ್ಲಿರುವಂತೆ ಇಲ್ಲಿ ನೀಡಿರುತ್ತೇನೆ.

ಈಗೊಂದು ೪೦ ವರ್ಷಗಳ ಹಿಂದೆ ಮಲೆನಾಡಿನ ನಮ್ಮ ಸಂಬಂಧಿಕರಲ್ಲಿಗೆ ಹೋಗಿದ್ದೆ. ಆಗ ಆ ಮನೆಯ ಹಿರಿಯರು ತನ್ನ ಮೊಮ್ಮಗ ಮಾಡಿದ ಯಾವುದೋ ಒಂದು ತಪ್ಪಿಗಾಗಿ  ಹೀಗೆ ಗದರಿಸುತ್ತಿದ್ದರು.

"..... ಮೂರು ಕಾಸಿನ ಕೆಲಸ ಮಾಡಿ ಮುಖ ಕೆಳಗೆ ಹಾಕಿ ನಿಂತಿದ್ದೀಯಲ್ಲ .... ಒಪ್ಪಾನೆ ಬತ್ತದವನೆ... ಇತ್ಯಾದಿ ಇತ್ಯಾದಿ.

ಬೈಗುಳದ ಕಾರಣ ಗೊತ್ತಿಲ್ಲ. ಅದು ನನಗೆ ಬೇಕಾಗಿಯೂ ಇಲ್ಲ. ಆದರೆ ಬೈಗುಳದಲ್ಲಿ ಎರಡು ಶಬ್ದಗಳು ನನ್ನನ್ನು ಯೋಚನಾಪರನನ್ನಾಗಿಸಿತು. "ಒಪ್ಪಾನೆ ಮತ್ತು ಮೂರು ಕಾಸು".

ಒಂದು, ಎರಡು, ಮೂರು ಇದಕ್ಕೆ ಪ, ಹ ಪರವಾದರೆ ಸಂಧಿಯಲ್ಲಿ ಪ ಕಾರ ಬರುವುದು ವ್ಯಾಕರಣ ನಿಯಮ. ಉದಾ: ಒಂದು +ಹೊತ್ತು - ಒಪ್ಪತ್ತು, ಎರಡು + ಹೊತ್ತು - ಇಪ್ಪತ್ತು , ಮೂರು + ಹತ್ತು - ಮುಪ್ಪತ್ತು (ಮುವ್ವತ್ತು ) ಇತ್ಯಾದಿ. ಹಾಗೆಯೇ ಒಂದು + ಹಾನೆ - ಒಪ್ಪಾನೆ, ಎರಡು + ಹಾನೆ -ಇಪ್ಪಾನೆ, ಮೂರು + ಹಾನೆ - ಮುಪ್ಪಾನೆ. ಇಲ್ಲಿ "ಹಾನೆ" ಎಂಬುದು ಹಿಂದಿನ ಅಳತೆ ಮಾನ.

ಕಾಸು - ಇದು ಕೆಳದಿ ಅರಸರ ಕಾಲದ ನಾಣ್ಯ. ಇದರಲ್ಲಿ ಅರೆಕಾಸು, ಚಿಕ್ಕಾಸು, ಎಂಬೆರಡು ಚಿಕ್ಕ ನಾಣ್ಯಗಳೂ ಇವೆ.               " ನೆರೆಪಾಪಿಯಾದ ಪುಷ್ಕರನೆಲ್ಲಿ ನಾನೆಲ್ಲಿ । ಅರೆಕಾಸಿನವ ಕೊಬ್ಬಿಸಿರಿಕೊಂಡನಲ್ಲ "  (ನಳ ಚರಿತ್ರೆ - ಧ್ವಜಪುರದ ನಾಗಪ್ಪಯ್ಯ - ೧೭ ನೇ ಶತಮಾನ )

ಇದೆಲ್ಲಾ ಸರಿ. ಇವು ಬೈಗುಳವಾಗುವುದು ಹೇಗೆ?

ಒಬ್ಬ ಮನುಷ್ಯನ ಬೆಲೆ ಅಂದರೆ ಕೂಲಿ ನಿರ್ಧರಿಸುವಾಗ ಅವನ ಶಕ್ತಿ, ಅದನ್ನು ಅನುಸರಿಸಿ ಅವನು ಪೂರೈಸಬಹುದಾದ ಕೆಲಸ ಇವುಗಳನ್ನು ಆಧರಿಸಿ ಇರುತ್ತದೆ. ಇಂದಿಗೂ ಮಕ್ಕಳಿಗೂ, ಮುದಕರಿಗೂ, ಯೌವನಸ್ಥರಿಗೂ ಕೂಲಿಯಲ್ಲಿ ವ್ಯತ್ಯಾಸ ಇದೆ ತಾನೆ? ಬತ್ತ, ಅಕ್ಕಿ ಮುಂತಾದ ಧಾನ್ಯವನ್ನು ಕೂಲಿಯಾಗಿ ಕೊಡುತ್ತಿದ್ದಾಗ ಅದನ್ನು ಅಂದು ಹಾನೆಯಲ್ಲಿ ಅಳೆದು ಕೊಡುತ್ತಿದ್ದರು. ಬಹುಶಃ ಅಂದಿನ ಕನಿಷ್ಠ ಕೂಲಿ ಅಂದರೆ ಒಂದು ಹಾನೆ ಬತ್ತ. " ಒಪ್ಪಾನೆ ಬತ್ತದವನು"ಎಂದರೆ ಕನಿಷ್ಠ ಕೂಲಿ ಪಡೆಯುವ ಅಯೋಗ್ಯ ಎಂದಾಗಬಹುದು. ಅದರಂತೆ ಮೂರು ಕಾಸಿನ ಕೆಲಸ ಎಂದರೆ ತೀರಾ ಹಗುರವಾದ ಕೆಲಸ. ಯಾರು ಒಪ್ಪದ ಹೀನ ಕೆಲಸ. ಹಿಂದಿ ಭಾಷೆಯ "ಹಲ್ಕಾ" ಎಂಬ ಪದ ಇದಕ್ಕೆ ಸರಿಯಾಗಬಹುದು.

ಒಂದೇ ಮಾತಿನಲ್ಲಿ - ಒಬ್ಬನನ್ನು ಅಯೋಗ್ಯ, ನೀಚನೆಂದೂ ಅವನು ಮಾಡಿದ ಕೆಲಸ ಹೀನ ಕೆಲಸವೆಂದೂ ಹೇಳುವುದಕ್ಕೆ ಆ ಹಿರಿಯರು " ಒಪ್ಪಾನೆ ಬತ್ತದವನು - ಮೂರು ಕಾಸಿನ ಕೆಲಸ" ಎಂಬ ಅರ್ಥದಲ್ಲಿ ಹೇಳಿರಬೇಕು.

ಇಂದಿಗೂ ಪಾರ್ಲಿಮೆಂಟಿನಲ್ಲಿ ಇದೇ ಅರ್ಥ ಕೊಡುವ "ವಾಗ್ದಂಡನೆ" ಇದೆಯಲ್ಲ.

ಇಷ್ಟು ಅರ್ಥವ್ಯಾಪ್ತಿಯುಳ್ಳ, ಅಶ್ಲೀಲವಲ್ಲದ ಬೈಗುಳ ಇಂದು ಭಾಷೆಯಿಂದ ಮರೆಯಾಗುತ್ತಿರುವುದು ವಿಷಾದಕರ.


ಲೇಖಕರು: ದಿ।। ಜಂಬೆ ಅಚ್ಯುತ ಹೆಬ್ಬಾರರು